ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ:ಮಧು ಕೋಡನಾಡು
ಪೂರ್ವ ಕರ್ಮದ ಫಲವ ಹೊತ್ತು, ಅಮ್ಮನುದರದಿ ಜನಿಸಿದೆ
ಅಲ್ಲಿ ಕಲ್ಮಶದಲ್ಲಿ ಹೊರಳುತ, ಜಠರಾಗ್ನಿಲಿ ದಹಿಸಿದೆ
ಕಷ್ಟದಲಿ ನಾ ಬಿದ್ದು ಎದ್ದರೂ, ನಿನ್ನ ಸ್ಮರಣೆಯ ಮರೆತಿಹೆ
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧ ||
ಬಾಲ್ಯದಲಿ ನಾ ದುಃಖದಿಂದಲಿ, ಸ್ತನ್ಯಪಾನಕೆ ತಪಿಸಿದೆ
ದೇಹದಲಿ ನಾ ತ್ರಾಣವಿಲ್ಲದೇ, ಜಂತುಬಾಧೆಯ ಸಹಿಸಿದೆ
ರೋಗ ರುಜಿನದಿ ನರಳುತಿದ್ದರೂ, ನಿನ್ನ ಸ್ಮರಣೆಯ ಮರೆತಿಹೆ
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೨ ||
ಪ್ರೌಢನಾದೊಡೆ ಪಂಚ ಮೋಹದಿ, ವಿಷಯ ಲಂಪಟ ಎನಿಸಿದೆ
ಹೆಣ್ಣು, ಹೊನ್ನು, ಪುತ್ರ ಮೋಹವು, ಎನ್ನ ಬುದ್ಧಿಯ ಭ್ರಮಿಸಿದೆ
ಸ್ವಾರ್ಥ ಲೋಭ ಗರ್ವದಿಂದಲಿ, ನಿನ್ನ ಸ್ಮರಣೆಯ ಮರೆತಿಹೆ
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೩ ||
ಮುಪ್ಪು ಅಡರಲು ಮನದ ಒಳಗೆ, ಮತ್ತೆ ಮತಿ ಗತಿ ತಪ್ಪಿದೆ
ರೋಗ ರುಜಿನ ವಿಯೋಗದಿಂದ, ದೇಹ ತಪಿಸುತ ಬತ್ತಿದೆ
ಸುಳ್ಳು ಮೋಹದ ಭ್ರಮೆಗೆ ಸಿಲುಕಿ, ನಿನ್ನ ಸ್ಮರಣೆಯ ಮರೆತಿಹೆ
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೪ ||
ಜೀವನದ ಪ್ರತಿ ಹೆಜ್ಜೆಯಲ್ಲೂ, ಅಡ್ಡಿ ಎದುರಿಸಿ ನಿಂತೆನು
ದ್ವಿಜನೇ ಆದರೂ ಬ್ರಹ್ಮ ಕರ್ಮವ, ಮಾಡಲಾರದೆ ಹೋದೆನು
ಶ್ರವಣ ಮನನವ ಮಾಡದೇ ನಾ, ಮಾಡಲೆಂತೋಪಾಸನೇ ?
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೫ ||
ಉಷೆಯಲೆದ್ದು ನಿನ್ನ ಪೂಜೆಗೆ, ಗಂಗೆ ತಾರದೇ ಹೋದೆನು
ನಿನ್ನ ಅರ್ಚನೆಗೊಂದು ಬಿಲ್ವದ, ದಳವ ತಂದುದ ಕಾಣೆನು
ಪುಷ್ಪ ಮಾಲಿಕೆ, ಗಂಧಲೇಪನ, ಕೆರೆಯ ಕಮಲವ ತಾರದ
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೬ ||
ಹಾಲು, ಮೊಸರು, ಜೇನು, ತುಪ್ಪ, ಶರ್ಕರಂಗಳ ತಾರದೇ
ಚಂದನಾದಿ ಸುಗಂಧ ದ್ರವ್ಯದಿ, ನಿನಗೆ ಲೇಪನ ಗೈಯದೇ
ಧೂಪ ದೀಪದ ಜೊತೆಗೆ ಮರೆತೆ, ಹಣ್ಣು ಭಕ್ಷ ನಿವೇದನೆ
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೭ ||
ಮನದಿ ಶಿವನನು ನೆನೆದು ದ್ವಿಜರಿಗೆ, ದಾನ ಧರ್ಮವಗೈಯದೇ
ಬೀಜಮಂತ್ರದ ಸಹಿತ ಅಗ್ನಿಗೆ, ಲಕ್ಷ ಹೋಮವ ಮಾಡದೇ
ಗಂಗೆ ತಟದಲಿ ನಿನ್ನ ಜಪಿಸಿ, ವ್ರತವಗೈಯದೇ ಹೋದೆನು
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೮ ||
ನಾಸಿಕಾಗ್ರದಿ ದೃಷ್ಟಿಯುಳ್ಳವ, ತ್ರಿಗುಣ ರಹಿತನೇ ಏಕನೇ,
ಸರ್ವಶುದ್ಧನೇ ನಿನ್ನ ದರುಶನ, ನಾನು ಮಾಡದೇ ಹೋದೆನು
ಏಕಚಿತ್ತದಿ ನಿನ್ನ ಸ್ಮರಣೆಯ, ಮಾಡದಾದೆನು ಶಂಕರ
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ನಿರಂತರ || ೯ ||
ಪದ್ಮಾಸನದಲಿ ಕುಳಿತು ಪ್ರಣವ, ಮಂತ್ರೋಚ್ಚಾರಣೆ ಗೈಯದೇ
ಅಂತರಂಗದ ಒಳಗೆ ನಿನ್ನನು, ಲಿಂಗರೂಪದಿ ನಿಲಿಸದೇ
ಜ್ಯೋತಿರೂಪನೆ ಬ್ರಹ್ಮರೂಪನೇ, ನಿನ್ನ ಧ್ಯಾನವ ಗೈಯದ
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೦ ||
ಹೃತ್ಪ್ರಕಾಶನೇ ಹೃದಯವಾಸನೇ, ಸಕಲ ವೇದದಿ ವೇದ್ಯನೇ
ಮುನಿಗಳರಿವಿಗೆ ಮಾತ್ರ ತಿಳಿಯುವ, ಸತ್ಯ ಶಾಂತ ಸ್ವರೂಪನೇ
ನಿದಿರೆ ಎಚ್ಚರ ಸ್ವಪ್ನದಲ್ಲೂ ತ್ರಿಗುಣ ರಹಿತನ ಸ್ಮರಿಸದಾ
ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೧ ||
ಮನ್ಮಥನ ಸಂಹರಿಸಿದವನೇ, ನಿಟಿಲ ನೇತ್ರದ ರುದ್ರನೇ
ಶಿರದಿ ಗಂಗೆ ಚಂದ್ರ ಧರಿಸಿದ, ಸರ್ಪಭೂಷಿತ ದೇವನೇ
ಗಜದ ಚರ್ಮವ ಧರಿಸಿ ನಿಂದಿಹ, ಮೂರು ಲೋಕದ ಒಡೆಯನೆ
ಮೋಕ್ಷ ಮಾರ್ಗಕೆ ನನ್ನ ಮನವನು, ನಿನ್ನಲಿರಿಸು ಶಂಭುವೇ || ೧೨ ||
ವಸ್ತು ವಾಹನ ರಾಜ್ಯ ಮೋಹ, ಧನ ಕನಕಗಳ ಮೋಹದಿ
ಬಂಧು ಬಾಂಧವ ಪಶುಗಳಿಂದ, ಎನಿತು ಲಾಭವು ಆತ್ಮಕೆ?
ನೀರ ಮೇಲಿನ ಗುಳ್ಳೆಯಂತಹ, ಕ್ಷಣಿಕ ಆಸೆಯ ಬಿಡಿಸುತ
ಗುರುವ ನೆನೆದು ಪಾರ್ವತಿ ಪತಿ, ನಿನ್ನ ಭಜನೆಯ ಮಾಡಿಸು || ೧೩ ||
ದಿನವು ಕಳೆದೊಡೆ ಆಯು ಯವ್ವನ, ಕೊಂಚ ಕೊಂಚವೇ ಕಳೆವುದು
ಕಳೆದು ಕಣ್ಮರೆಯಾದ ಜೀವನ, ಮತ್ತೆ ಹಿಂದಕೆ ಬಾರದು
ಧನವು ಅಲೆಗಳ ಏರು ಇಳಿತದ, ಹಾಗೆ ಎಂದಿಗೂ ನಶ್ವರ
ಮಿಂಚಿನಂತೆ ಕ್ಷಣಿಕ ಜೀವನ, ರಕ್ಷಿಸೆನ್ನನು ಈಶ್ವರ || ೧೪ ||
ವಿಶ್ವಕಾರಣ ಸ್ವಪ್ರಕಾಶನೇ, ಪಾರ್ವತೀ ಪತಿ ವಂದನೆ
ಸರ್ಪಭೂಷಣ ಜಗದ ಸಕಲ, ಜೀವದೊಡಯನೇ ವಂದನೆ
ಸೂರ್ಯ ಚಂದ್ರ ಅಗ್ನಿ ನೇತ್ರನೇ, ವಿಷ್ಣು ಪ್ರಿಯನೇ ವಂದನೆ
ಭಕ್ತ ಪೋಷಣೆಗೈವ ಶಿವನೇ, ಶಂಕರನೇ ನಿನಗೊಂದನೆ || ೧೫ ||
ಶ್ವೇತ ದಂತನೆ, ಮಂದಸ್ಮಿತನೇ, ಶ್ವೇತ ಭಸ್ಮದ ಲೇಪನೇ
ಶ್ವೇತವರ್ಣದ ಕರ ಕಪಾಲ, ಶೂಲ ಕುಂಡಲ ಧಾರನೇ
ಶಿರದ ಚಂದಿರ, ಕುಳಿತ ನಂದಿ, ಜಟೆಯ ಗಂಗಾ ಜಲದಲಿ
ಶ್ವೇತವರ್ಣದಿ ಶೋಭೆಗೈವನೇ, ಕ್ಷಮೆಯ ಮಳೆಯನೇ ಸುರಿಸು ನೀ || ೧೬ ||
ಪೌರೋಹಿತ್ಯ, ರಜನಿ ಚರಿತ, ಮಠದ ಅಧಿಪತಿ ಕಾರ್ಯವ,
ಗ್ರಾಮ ಪ್ರತಿನಿಧಿ, ಸುಳ್ಳು ಸಾಕ್ಷ, ದುರ್ಜನಂಗಳ ಸಂಘವ,
ಬ್ರಹ್ಮ ದ್ವೇಷ, ಭಿಕ್ಷಾ ವೃತ್ತಿ, ಪಶುಗಳಲ್ಲಿ ನಿರ್ದಯ,
ಇಂತ ದುಸ್ಥಿತಿ ಜನ್ಮ ಜನ್ಮಕೂ ನೀಡಬೇಡವೋ ಪಶುಪತೇ || ೧೭ ||
ಕರದಿ ಚರಣದಿ, ಮಾತು, ಶ್ರವಣದಿ, ಮಾಡಿದೆನ್ನಪರಾಧವ
ತಿಳಿದೋ ತಿಳಿಯದೋ, ಗೈದ, ಗೈಯದ, ಎನ್ನ ಸಾವಿರ ಪಾಪವ
ಕರುಣಾ ಸಾಗರನಾದ ದೇವನೇ, ಕ್ಷಮಿಸು ಎಲ್ಲವನಿಂದು ನೀ
ಜಯತು ಜಯತು, ಜಯತು ದೇವನೆ ಜಯತು ಶಂಭೋ ಶಂಕರ || ೧೮ ||