ಶಿವ ಅಪರಾಧಕ್ಷಮಾಪಣಾ ಸ್ತೋತ್ರ ಕನ್ನಡ ಅನುವಾದ | ರಚನೆ:ಮಧು ಕೋಡನಾಡು | SHIVA APARADHA KSHAMAPANA STOTRA KANNADA

ಹಾಡಲು ಕಲಿಯಿರಿ(CLICK HERE TO LEARN THIS SONG) 

ರಚನೆ:ಮಧು ಕೋಡನಾಡು

ಪೂರ್ವ ಕರ್ಮದ ಫಲವ ಹೊತ್ತು, ಅಮ್ಮನುದರದಿ ಜನಿಸಿದೆ

ಅಲ್ಲಿ ಕಲ್ಮಶದಲ್ಲಿ ಹೊರಳುತ, ಜಠರಾಗ್ನಿಲಿ ದಹಿಸಿದೆ

ಕಷ್ಟದಲಿ ನಾ ಬಿದ್ದು ಎದ್ದರೂ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧ ||


ಬಾಲ್ಯದಲಿ ನಾ ದುಃಖದಿಂದಲಿ, ಸ್ತನ್ಯಪಾನಕೆ ತಪಿಸಿದೆ 

ದೇಹದಲಿ ನಾ ತ್ರಾಣವಿಲ್ಲದೇ, ಜಂತುಬಾಧೆಯ ಸಹಿಸಿದೆ

ರೋಗ ರುಜಿನದಿ ನರಳುತಿದ್ದರೂ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೨ ||


ಪ್ರೌಢನಾದೊಡೆ ಪಂಚ ಮೋಹದಿ, ವಿಷಯ ಲಂಪಟ ಎನಿಸಿದೆ

ಹೆಣ್ಣು, ಹೊನ್ನು, ಪುತ್ರ ಮೋಹವು, ಎನ್ನ ಬುದ್ಧಿಯ ಭ್ರಮಿಸಿದೆ

ಸ್ವಾರ್ಥ ಲೋಭ ಗರ್ವದಿಂದಲಿ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೩ ||


ಮುಪ್ಪು ಅಡರಲು ಮನದ ಒಳಗೆ, ಮತ್ತೆ ಮತಿ ಗತಿ ತಪ್ಪಿದೆ

ರೋಗ ರುಜಿನ ವಿಯೋಗದಿಂದ, ದೇಹ ತಪಿಸುತ ಬತ್ತಿದೆ 

ಸುಳ್ಳು ಮೋಹದ ಭ್ರಮೆಗೆ ಸಿಲುಕಿ, ನಿನ್ನ ಸ್ಮರಣೆಯ ಮರೆತಿಹೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೪ ||


ಜೀವನದ ಪ್ರತಿ ಹೆಜ್ಜೆಯಲ್ಲೂ, ಅಡ್ಡಿ ಎದುರಿಸಿ ನಿಂತೆನು

ದ್ವಿಜನೇ ಆದರೂ ಬ್ರಹ್ಮ ಕರ್ಮವ, ಮಾಡಲಾರದೆ ಹೋದೆನು

ಶ್ರವಣ ಮನನವ ಮಾಡದೇ ನಾ, ಮಾಡಲೆಂತೋಪಾಸನೇ ? 

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೫ ||


ಉಷೆಯಲೆದ್ದು ನಿನ್ನ ಪೂಜೆಗೆ, ಗಂಗೆ ತಾರದೇ ಹೋದೆನು 

ನಿನ್ನ ಅರ್ಚನೆಗೊಂದು ಬಿಲ್ವದ, ದಳವ ತಂದುದ ಕಾಣೆನು

ಪುಷ್ಪ ಮಾಲಿಕೆ, ಗಂಧಲೇಪನ, ಕೆರೆಯ ಕಮಲವ ತಾರದ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೬ ||


ಹಾಲು, ಮೊಸರು, ಜೇನು, ತುಪ್ಪ, ಶರ್ಕರಂಗಳ ತಾರದೇ

ಚಂದನಾದಿ ಸುಗಂಧ ದ್ರವ್ಯದಿ, ನಿನಗೆ ಲೇಪನ ಗೈಯದೇ

ಧೂಪ ದೀಪದ ಜೊತೆಗೆ ಮರೆತೆ, ಹಣ್ಣು ಭಕ್ಷ ನಿವೇದನೆ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೭ ||


ಮನದಿ ಶಿವನನು ನೆನೆದು ದ್ವಿಜರಿಗೆ, ದಾನ ಧರ್ಮವಗೈಯದೇ

ಬೀಜಮಂತ್ರದ ಸಹಿತ ಅಗ್ನಿಗೆ, ಲಕ್ಷ ಹೋಮವ ಮಾಡದೇ

ಗಂಗೆ ತಟದಲಿ ನಿನ್ನ ಜಪಿಸಿ, ವ್ರತವಗೈಯದೇ ಹೋದೆನು

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೮ ||


ನಾಸಿಕಾಗ್ರದಿ ದೃಷ್ಟಿಯುಳ್ಳವ, ತ್ರಿಗುಣ ರಹಿತನೇ ಏಕನೇ,

ಸರ್ವಶುದ್ಧನೇ ನಿನ್ನ ದರುಶನ, ನಾನು ಮಾಡದೇ ಹೋದೆನು

ಏಕಚಿತ್ತದಿ ನಿನ್ನ ಸ್ಮರಣೆಯ, ಮಾಡದಾದೆನು ಶಂಕರ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ನಿರಂತರ || ೯ ||


ಪದ್ಮಾಸನದಲಿ ಕುಳಿತು ಪ್ರಣವ, ಮಂತ್ರೋಚ್ಚಾರಣೆ ಗೈಯದೇ

ಅಂತರಂಗದ ಒಳಗೆ ನಿನ್ನನು, ಲಿಂಗರೂಪದಿ ನಿಲಿಸದೇ

ಜ್ಯೋತಿರೂಪನೆ ಬ್ರಹ್ಮರೂಪನೇ, ನಿನ್ನ ಧ್ಯಾನವ ಗೈಯದ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೦ ||


ಹೃತ್ಪ್ರಕಾಶನೇ ಹೃದಯವಾಸನೇ, ಸಕಲ ವೇದದಿ ವೇದ್ಯನೇ

ಮುನಿಗಳರಿವಿಗೆ ಮಾತ್ರ ತಿಳಿಯುವ, ಸತ್ಯ ಶಾಂತ ಸ್ವರೂಪನೇ

ನಿದಿರೆ ಎಚ್ಚರ ಸ್ವಪ್ನದಲ್ಲೂ  ತ್ರಿಗುಣ ರಹಿತನ ಸ್ಮರಿಸದಾ

ಎನ್ನ ಈ ಅಪರಾಧವೆಲ್ಲವ, ಕ್ಷಮಿಸು ಶಿವನೇ ಶಂಭುವೇ || ೧೧ ||


ಮನ್ಮಥನ ಸಂಹರಿಸಿದವನೇ, ನಿಟಿಲ ನೇತ್ರದ ರುದ್ರನೇ

ಶಿರದಿ ಗಂಗೆ ಚಂದ್ರ ಧರಿಸಿದ, ಸರ್ಪಭೂಷಿತ ದೇವನೇ

ಗಜದ ಚರ್ಮವ ಧರಿಸಿ ನಿಂದಿಹ, ಮೂರು ಲೋಕದ ಒಡೆಯನೆ

ಮೋಕ್ಷ ಮಾರ್ಗಕೆ ನನ್ನ ಮನವನು, ನಿನ್ನಲಿರಿಸು ಶಂಭುವೇ || ೧೨ ||


ವಸ್ತು ವಾಹನ ರಾಜ್ಯ ಮೋಹ, ಧನ ಕನಕಗಳ ಮೋಹದಿ

ಬಂಧು ಬಾಂಧವ ಪಶುಗಳಿಂದ, ಎನಿತು ಲಾಭವು ಆತ್ಮಕೆ?

ನೀರ ಮೇಲಿನ ಗುಳ್ಳೆಯಂತಹ, ಕ್ಷಣಿಕ ಆಸೆಯ ಬಿಡಿಸುತ

ಗುರುವ ನೆನೆದು ಪಾರ್ವತಿ ಪತಿ, ನಿನ್ನ ಭಜನೆಯ ಮಾಡಿಸು || ೧೩ ||


ದಿನವು ಕಳೆದೊಡೆ ಆಯು ಯವ್ವನ, ಕೊಂಚ ಕೊಂಚವೇ ಕಳೆವುದು

ಕಳೆದು ಕಣ್ಮರೆಯಾದ ಜೀವನ, ಮತ್ತೆ ಹಿಂದಕೆ ಬಾರದು

ಧನವು ಅಲೆಗಳ ಏರು ಇಳಿತದ, ಹಾಗೆ ಎಂದಿಗೂ ನಶ್ವರ

ಮಿಂಚಿನಂತೆ ಕ್ಷಣಿಕ ಜೀವನ, ರಕ್ಷಿಸೆನ್ನನು ಈಶ್ವರ || ೧೪ ||


ವಿಶ್ವಕಾರಣ ಸ್ವಪ್ರಕಾಶನೇ, ಪಾರ್ವತೀ ಪತಿ ವಂದನೆ

ಸರ್ಪಭೂಷಣ ಜಗದ ಸಕಲ, ಜೀವದೊಡಯನೇ ವಂದನೆ 

ಸೂರ್ಯ ಚಂದ್ರ ಅಗ್ನಿ ನೇತ್ರನೇ, ವಿಷ್ಣು ಪ್ರಿಯನೇ ವಂದನೆ

ಭಕ್ತ ಪೋಷಣೆಗೈವ ಶಿವನೇ, ಶಂಕರನೇ ನಿನಗೊಂದನೆ  || ೧೫ ||


ಶ್ವೇತ ದಂತನೆ, ಮಂದಸ್ಮಿತನೇ, ಶ್ವೇತ ಭಸ್ಮದ ಲೇಪನೇ

ಶ್ವೇತವರ್ಣದ ಕರ ಕಪಾಲ, ಶೂಲ ಕುಂಡಲ ಧಾರನೇ

ಶಿರದ ಚಂದಿರ, ಕುಳಿತ ನಂದಿ, ಜಟೆಯ ಗಂಗಾ ಜಲದಲಿ

ಶ್ವೇತವರ್ಣದಿ ಶೋಭೆಗೈವನೇ, ಕ್ಷಮೆಯ ಮಳೆಯನೇ ಸುರಿಸು ನೀ  || ೧೬ ||


ಪೌರೋಹಿತ್ಯ, ರಜನಿ ಚರಿತ, ಮಠದ ಅಧಿಪತಿ ಕಾರ್ಯವ,

ಗ್ರಾಮ ಪ್ರತಿನಿಧಿ, ಸುಳ್ಳು ಸಾಕ್ಷ, ದುರ್ಜನಂಗಳ ಸಂಘವ,

ಬ್ರಹ್ಮ ದ್ವೇಷ, ಭಿಕ್ಷಾ ವೃತ್ತಿ, ಪಶುಗಳಲ್ಲಿ ನಿರ್ದಯ,

ಇಂತ ದುಸ್ಥಿತಿ ಜನ್ಮ ಜನ್ಮಕೂ ನೀಡಬೇಡವೋ ಪಶುಪತೇ  || ೧೭ ||


ಕರದಿ ಚರಣದಿ, ಮಾತು, ಶ್ರವಣದಿ, ಮಾಡಿದೆನ್ನಪರಾಧವ

ತಿಳಿದೋ ತಿಳಿಯದೋ, ಗೈದ, ಗೈಯದ, ಎನ್ನ ಸಾವಿರ ಪಾಪವ

ಕರುಣಾ ಸಾಗರನಾದ ದೇವನೇ, ಕ್ಷಮಿಸು ಎಲ್ಲವನಿಂದು ನೀ

ಜಯತು ಜಯತು, ಜಯತು ದೇವನೆ ಜಯತು ಶಂಭೋ ಶಂಕರ || ೧೮ ||

No comments:

Post a Comment

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ | NEE MAAYEYOLAGO NINNOLU MAAYEYO | KANAKADASA SONG

ಹಾಡಲು ಕಲಿಯಿರಿ(CLICK HERE TO LEARN THIS SONG)   ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ನೀ ದೇಹದೊಳಗೂ ನಿನ್ನೊಳು ದೇಹವೊ ಹರಿಯೆ |ಪ|  ಬಯಲೊಳಗೆ ಆಲಯವೂ ಆಲಯದಿ ಬಯ...