ಹಾಡಲು ಕಲಿಯಿರಿ(CLICK HERE TO LEARN THIS SONG)
ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶಮಾಡು ಶ್ರೀಶ ಕೇಶವ, ಶ್ರೀಶ ಕೇಶವ |
ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ ||
ಶೋಧಿಸೆನ್ನ ಭವದ ಕಲುಷ ಭೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ , ಬಿಡಿಸು ಮಾಧವ |
ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆನಯ್ಯ
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ ||
ಭ್ರಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ , ವಿಷ್ಣುವೇ |
ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ನುಡಿಯುವಂತೆ
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ ||
ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸೋ ಶ್ರೀತ್ರಿವಿಕ್ರಮ, ಶ್ರೀತ್ರಿವಿಕ್ರಮ |
ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ ||
ಮೊದಲು ನಿನ್ನ ಪಾದಪೂಜೆ ಒದಗುವಂತೆ ಮಾಡೋ ಎನ್ನ
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ , ಮುದದಿ ಶ್ರೀಧರ |
ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ ||
ಬಿದ್ದು ಭವದನೇಕ ಜನುಮ ಬದ್ದನಾಗಿ ಕಲುಷದಿಂದ
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ , ಪದ್ಮನಾಭನೆ |
ಕಾಮಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸು
ಶ್ರೀಮಹಾನುಭಾವನಾದ ದಾಮೋದರ ||
ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿಯನ್ನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ , ಸಂಕರ್ಷಣ |
ಏಸು ಜನ್ಮ ಬಂದರೇನು ದಾಸನಲ್ಲವೇನು ನಾನು
ಘಾಸಿ ಮಾಡದಿರು ಇನ್ನು ವಾಸುದೇವನೇ ||
ಬುದ್ಧಿ ಶೂನ್ಯನಾಗಿ ಎನ್ನ ಬದ್ಧಕಾಯ ಕುಹಕ ಮನವ
ತಿದ್ದಿ ಹೃದಯ ಶುದ್ಧಿ ಮಾಡೋ ಪ್ರದ್ಯುಮ್ನನೇ , ಪ್ರದ್ಯುಮ್ನನೇ |
ಜನನಿ ಜನಕ ನೀನೆಯೆಂದು ನೆನೆವೆನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ ||
ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮ
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ, ಪುರುಷೋತ್ತಮ
|
ಸಾಧುಸಂಗ ಕೊಟ್ಟು ನಿನ್ನ ಪಾದಭಜನೆ ಇತ್ತು ಎನ್ನ
ಭೇದಮಾಡಿ ನೋಡದಿರೊ ಹೇ ಅಧೋಕ್ಷಜ ||
ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ ನಾರಸಿಂಹನೇ , ನಾರಸಿಂಹನೇ
|
ಸಂಚಿತಾದಿ ಪಾಪಗಳನು ಕಿಂಚಿತಾದ ಪೀಡೆಗಳನು
ಮುಂಚಿತಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತ ||
ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ , ಶ್ರೀ ಜನಾರ್ಧನ |
ಜಪತಪಾನುಷ್ಠಾನವಿಲ್ಲ ದೆ ಕುಪಿತಗಾಮಿಯಾದ ಎನ್ನ
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ ||
ಮೊರೆಯ ಇಡುವೆನಯ್ಯ ನಿನಗೆ ಶರಧಿಶಯನ ಶುಭಮತಿಯ
ಇರಿಸೋ ಭಕ್ತರೊಳಗೆ ಪರಮ ಪುರುಷ ಶ್ರೀಹರೇ , ಪುರುಷ ಶ್ರೀಹರೇ |
ಹುಟ್ಟಿಸಲೇಬೇಡ ಇನ್ನು ಹುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ ||
ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರ
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ , ಕೇಶವ |
ಮರೆಯದಲೆ ಹರಿಯ ನಾಮ ಬರೆದು ಓದಿ ಪೇಳ್ದವರಿಗೆ
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ , ನೆಲೆಯಾದಿಕೇಶವ || ಈಶ ನಿನ್ನ||
..................................................................................
No comments:
Post a Comment