ವಂದಿಸುವುದಾದಿಯಲಿ ಗಣನಾಥನ |
ಸಂದೇಹ ಸಲ್ಲ ಶ್ರೀ ಹರಿಯಾಜ್ಞೆ ಇದಕುಂಟು ||
ಹಿಂದೆ ರಾವಣ ತಾನು ವಂದಿಸದೆ ಗಜಮುಖನ
ನಿಂದು ತಪವನು ಗೈದು ವರ ಪಡೆಯಲು
ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ
ತಂದ ವರಗಳನೆಲ್ಲ ಧರೆಗೆ ಇಳಿಸಿದನು ||೧||
ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ
ಮುಂದೆ ಗಣಪನ ಪೂಜಿಸೆಂದು ಪೇಳೆ
ಒಂದೇ ಮನದಲಿ ಬಂದು ಪೂಜಿಸಲು ಗಣನಾಥ
ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||೨||
ಇಂದು ಜಗವೆಲ್ಲ ಉಮೆನಂದನನ ಪೂಜಿಸಲು
ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು
ತಂದೆ ಸಿರಿ ಪುರಂದರವಿಠಲನ ಸೇವೆಯೊಳು
ಬಂದ ವಿಘ್ನವ ಕಳೆದಾನಂದವನು ಕೊಡುವ ||೩||
...........................................................................................
No comments:
Post a Comment