ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು
ದಾಟಿ ಬಂದ ಈ ಶರೀರ |
ತಾನಲ್ಲ ತನ್ನದಲ್ಲ ಆಸೆ ತರವಲ್ಲ ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು || ಪ ||
ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ
ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು |
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋ |
ದೋಷ ನಾಶಿ ಕೃಷ್ಣೆ ಗಂಗೆ ಗೋದಾವರಿ ಭವನಾಶಿ |
ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ |
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ |
ಏಸು ಬಾರಿ ಮಾಡಿದರು ಫಲವೇನು ಈ ಛಲವೇನು
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು || 1 ||
ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು
ಒಂದು ಬಾರಿ ಯಾರೂ ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ |
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ |
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ |
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು || 2 ||
ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ |
ಸೂರೆಯೊಳು ಸೂರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ |
ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ |
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮೃತವನ್ನುಂಡು ಸುಖಿಸೋ ಲಂಡ ಜೀವವೇ ಎಲೇ ಭಂಡ ಜೀವವೇ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು || 3 ||
………………………………………………………………………………………….
No comments:
Post a Comment