ಕನಕದಾಸನ ಮೇಲೆ ದಯಮಾಡಲು ವ್ಯಾಸ
ಮುನಿಮಠದ ಜನರೆಲ್ಲ ದೂರಿ ಕೊಂಬುವರು||
ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು
ದೂರ್ತರಾಗಿದ್ದ ವಿದ್ವಾಂಸರೆಲ್ಲ
ಸಾರ್ಥಕಾಯಿತು ಇವರ ಸನ್ಯಾಸಿತನವೆಲ್ಲ
ಪೂರ್ತ್ಯಾಗಲೆಂತೆನಲು ಯತಿಯು ನಗುತಿಹನು||1||
ಮರುದಿನ ಅವರವರ ಪರಿಕಿಸಲಿಬೇಕೆಂದು
ಕರೆದು ವಿದ್ವಾಂಸರನು ಕನಕನ್ನ ಬಿಡದೆ
ಕರದಲ್ಲಿ ಕದಳಿಯ ಫಲಗಳನೆ ಕೊಟ್ಟು
ಯಾರಿರದ ಸ್ಥಳದಲ್ಲಿ ಮೆದ್ದು ಬನ್ನಿರೆನಲು||2||
ಊರ ಹೊರಗೆಹೋಗಿ ಬೇರೆ ಬೇರೆ ಕುಳಿತು
ತೋರದಲೆ ಎಲ್ಲರೂ ಮೆದ್ದು ಬರಲು |
ತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತ
ಸಾರಿ ಕದಳೀ ಫಲವ ತಂದು ಮುಂದಿಟ್ಟ||3||
ಡಿಂಬದೊಳು ಶಬ್ದವಾಗಾದಿ ಶ್ರೋತ್ರಗಳಲ್ಲಿ
ಇಂಬಾಗಿ ತತ್ವೇಶರೆಲ್ಲ ತುಂಬಿಹರೊ |
ತಿಂಬುವುದು ಹೇಗೆನುತ ವ್ಯಾಸರಾಯರ ಕೇಳೆ
ಸಂಭ್ರಮದವರೆಲ್ಲ ಕುಳಿತು ಕೇಳಿದರು ॥4||
ಮಾಣಿಕವು ಕೋಡಗನ ಕೈಯ್ಯಲ್ಲಿ ಇದ್ದಂತೆ
ಕೋಣನೆದುರಿಗ ಕಿನ್ನರಿಯ ಮೀಟಿದಂತೆ
ವೇಣುಧ್ವನಿ ಬಧಿರನ ಬಳಿ ಮಾಡಿದಂತೆ
ಕಣ್ಣು ಕಾಣದವನಿಗೆ ಕನ್ನಡಿಯ ತೋರಿದಂತೆ॥5||
ನೋಡಿದರೆ ಈ ಕನಕನಾಡುವ ಮಾತುಗಳ
ಮೂಡಜನರರಿಯಬಲ್ಲರೆ ಮಹಿಮೆಯಾ।
ನಾಡಾಡಿಯಂತೆಯೇ ಮಾಡಿ ಬಿಟ್ಟರು ಇವಗೆ
ನಾಡೆಲ್ಲ ಹುಡುಕಿದರು ಈಡಾರ ಕಾಣೆ ॥6||
ತಮ್ಮ ಕೈ ಮುಷ್ಟಿಯನು ಪಿಡಿದು ಕೇಳಲು ಯತಿಯು
ತಮ ತಮಗೆ ತೋರಿದ್ದು ಪೇಳೆ ಬ್ರಾಹ್ಮಣರು
ಗಮ್ಮನೆ ಕನಕ ಸಿರಿ ವಾಸುದೇವನೆ ಪರ
ಬೊಮ್ಮ ಪುರಂದರ ವಿಟ್ಟಲನೆನುತ ಸಾರಿದನು ॥7||
..............................................................................................................
No comments:
Post a Comment