ಹಾಡಲು ಕಲಿಯಿರಿ(CLICK HERE TO LEARN THIS SONG)
ರಚನೆ: ವಿಜಯ ದಾಸರು
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ
ನಿನ್ನದೇ ಸಕಲ ಸಂಪತ್ತು ||
ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ
ಊರ್ಣ ವಿಚಿತ್ರ ಸುವಸನ
ವರ್ಣವರ್ಣದಿಂದ ಬಾಹೋದೇನೊ
ಸಂಪೂರ್ಣ ಗುಣಾರ್ಣವ ದೇವಾ |
ಸಂಜೀತನಕ ಇದ್ದು ಸಣ್ಣ ಸೌಟಿನ ತುಂಬ
ಗಂಜಿ ಕಾಣದೆ ಬಳಲಿದೆನೊ
ವ್ಯಂಜನ ನಾನಾ ಸುಭಕ್ಷ್ಯ ಭೋಜ್ಯಂಗಳ
ಭುಂಜಿಸುವದು ಮತ್ತೇನೋ ||1||
ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು,
ತಬ್ಬಿಬ್ಬುಗೊಂಡೆ ನಾ ಹಿಂದೆ
ನಿಬ್ಬರದಲಿ ಸರ್ವರ ಕೂಡುಂಬೋ
ಹಬ್ಬದೂಟವನುಣಿಸುವೆಯೋ|
ಮನೆಮನೆ ತಿರುಗಿದರೂ ಕಾಸು ಪುಟ್ಟದೆ ಸು
ಮ್ಮನೆ ಜಾಲ್ವರಿದು ಬಳಲಿದೆನೋ
ಹಣ ಹೊನ್ನು ದ್ರವ್ಯ ಒಮ್ಮಿಂದೊಮ್ಮೆ ಈಗ
ಎನಗೆ ಪ್ರಾಪುತಿ ನೋಡೋ ಜೀಯ ||2||
ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ
ಮೆದ್ದೆನೆಂದರೆ ಈಯದಾದೆ
ಈ ಧರೆಯೊಯೊಳಗೆ ಸತ್ಪಾತ್ರರ ಕೂಡುಂಬೋ
ಪದ್ಧತಿ ನೋಡೊ ಧರ್ಮಾತ್ಮ
ನೀಚೋಚ್ಛ ತಿಳಿಯದೆ ಸರ್ವರ ಚರಣಕೆ
ಚಾಚಿದೆ ನೊಸಲು ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ
ವಾಚಕೆ ನಿಲುಕದೊ ಹರಿಯೆ ||3||
ವೈದಿಕ ಪದವಿಯ ಈವಗೆ ಲೌಕಿಕ
ನೈದಿಸುವುದು ಬಲುಖ್ಯಾತಿ
ಮೈದುನಗೊಲಿದ ಶ್ರೀ ವಿಜಯವಿಠಲ
ನಿನ್ನ ಪಾದ ಸಾಕ್ಷಿಯ ಅನುಭವವೊ
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೊ ಮಹರಾಯ
ಎನ್ನ ಪುಣ್ಯಗಳಿಂದ ಈ ಪರಿ ಉಂಟೇನೋ
ನಿನ್ನದೇ ಸಕಲ ಸಂಪತ್ತು ||4||
....................................................................................
No comments:
Post a Comment